ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಯುನೈಟೆಡ್ ಕಿಂಗ್ಡಮ್ ಪ್ರಧಾನಮಂತ್ರಿ ಗೌರವಾನ್ವಿತ ಸರ್ ಕೀರ್ ಸ್ಟಾರ್ಮರ್ ಅವರಿಂದು ದೂರವಾಣಿ ಸಂಭಾಷಣೆ ನಡೆಸಿದರು. ಮಹತ್ವಾಕಾಂಕ್ಷೆಯ ಮತ್ತು ಪರಸ್ಪರ ಪ್ರಯೋಜನಕಾರಿಯಾದ ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ ಮತ್ತು ದುಪ್ಪಟ್ಟು ಕೊಡುಗೆ ಒಪ್ಪಂದವನ್ನು ಯಶಸ್ವಿಯಾಗಿ ಅಂತಿಮಗೊಳಿಸಿರುವುದನ್ನು ಉಭಯ ನಾಯಕರು ಸ್ವಾಗತಿಸಿದರು.
ಉಭಯ ಆರ್ಥಿಕತೆಗಳಲ್ಲಿ ವ್ಯಾಪಾರ, ಹೂಡಿಕೆ, ನಾವೀನ್ಯತೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ದ್ವಿಪಕ್ಷೀಯ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯಲ್ಲಿ ಇದು ಒಂದು ಐತಿಹಾಸಿಕ ಮೈಲಿಗಲ್ಲು ಎಂದು ನಾಯಕರು ಬಣ್ಣಿಸಿದರು. ವಿಶ್ವದ 2 ಬೃಹತ್ ಮತ್ತು ಮುಕ್ತ ಮಾರುಕಟ್ಟೆ ಆರ್ಥಿಕತೆಗಳ ನಡುವಿನ ಮಹತ್ವಾಕಾಂಕ್ಷಿ ಒಪ್ಪಂದಗಳು ವ್ಯಾಪಾರ ವ್ಯವಹಾರಗಳಿಗೆ ಹೊಸ ಅವಕಾಶಗಳನ್ನು ತೆರೆಯುತ್ತವೆ, ಆರ್ಥಿಕ ಸಂಪರ್ಕಗಳನ್ನು ಬಲಪಡಿಸುತ್ತವೆ ಮತ್ತು ಜನರಿಂದ ಜನರಿಗೆ ಸಂಬಂಧಗಳನ್ನು ಗಾಢವಾಗಿಸುತ್ತವೆ ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು.
ವಿಶ್ವಾದ್ಯಂತದ ಆರ್ಥಿಕತೆಗಳೊಂದಿಗೆ ಮೈತ್ರಿ ಬಲಪಡಿಸುವುದು ಮತ್ತು ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡುವುದರಿಂದ ಬಲಿಷ್ಠವಾದ ಮತ್ತು ಹೆಚ್ಚು ಸುರಕ್ಷಿತ ಆರ್ಥಿಕತೆ ಒದಗಿಸುವ ಬದಲಾವಣೆ ಯೋಜನೆಯ ಭಾಗವಾಗಿದೆ ಎಂದು ಯುಕೆ ಪ್ರಧಾನಮಂತ್ರಿ ಸ್ಟಾರ್ಮರ್ ಹೇಳಿದರು.
ಭಾರತ ಮತ್ತು ಯುಕೆ ನಡುವಿನ ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ವಿಸ್ತರಿಸುವುದು ಹೆಚ್ಚುತ್ತಿರುವ ಬಲವಾದ ಮತ್ತು ಬಹುಮುಖಿ ಪಾಲುದಾರಿಕೆಯ ಮೂಲಾಧಾರವಾಗಿ ಉಳಿದಿದೆ ಎಂದು ಇಬ್ಬರು ನಾಯಕರು ಒಪ್ಪಿಕೊಂಡರು. ಸರಕು ಮತ್ತು ಸೇವೆಗಳ ವ್ಯಾಪಾರ ಒಳಗೊಂಡ ಸಮತೋಲಿತ, ಸಮಾನ ಮತ್ತು ಮಹತ್ವಾಕಾಂಕ್ಷೆಯ ಮುಕ್ತ ವ್ಯಾಪಾರ ಒಪ್ಪಂದ(ಎಫ್ಟಿಎ)ದ ತೀರ್ಮಾನವು ದ್ವಿಪಕ್ಷೀಯ ವ್ಯಾಪಾರವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ, ಉದ್ಯೋಗದ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತದೆ, ಜೀವನ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಎರಡೂ ದೇಶಗಳ ನಾಗರಿಕರ ಒಟ್ಟಾರೆ ಯೋಗಕ್ಷೇಮ ಸುಧಾರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಜಾಗತಿಕ ಮಾರುಕಟ್ಟೆಗಳಿಗೆ ಉತ್ಪನ್ನಗಳು ಮತ್ತು ಸೇವೆಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ಇದು ಎರಡೂ ರಾಷ್ಟ್ರಗಳಿಗೆ ಹೊಸ ಸಾಮರ್ಥ್ಯವನ್ನು ತೆರೆಯುತ್ತದೆ. ಈ ಒಪ್ಪಂದವು ಭಾರತ-ಯುಕೆ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯ ಬಲವಾದ ಅಡಿಪಾಯವನ್ನು ಭದ್ರಪಡಿಸುತ್ತದೆ, ಸಹಭಾಗಿತ್ವ ಮತ್ತು ಸಮೃದ್ಧಿಯ ಹೊಸ ಯುಗಕ್ಕೆ ದಾರಿ ಮಾಡಿಕೊಡುತ್ತದೆ.
ಯುಕೆ ಪ್ರಧಾನಮಂತ್ರಿ ಸ್ಟಾರ್ಮರ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ಮೋದಿ ಆಹ್ವಾನಿಸಿದರು. ಉಭಯ ನಾಯಕರು ನಿಕಟ ಸಂಪರ್ಕದಲ್ಲಿರಲು ಒಪ್ಪಿಕೊಂಡರು.


