ಮೂಲಭೂತ ಸೌಕರ್ಯ ಅಭಿವೃದ್ಧಿ ನಮ್ಮ ಸರಕಾರದ ಆದ್ಯತೆಯಾಗಿದೆ ಮತ್ತು ಕೊಲ್ಲಂ ಬೈಪಾಸ್ ಒಂದು ಉದಾಹರಣೆಯಾಗಿದೆ: ಪ್ರಧಾನಿ ಮೋದಿ
ಅಟಲ್ ಜಿ ಸಂಪರ್ಕದ ಶಕ್ತಿ ಮೇಲೆ ನಂಬಿಕೆ ಹೊಂದಿದ್ದರು ಮತ್ತು ನಾವು ಅವರ ದೃಷ್ಟಿಯನ್ನು ಮುಂದೆ ಕೊಂಡೊಯ್ಯುತ್ತೇವೆ : ಪ್ರಧಾನಿ ಮೋದಿ
ನಾವು ರಸ್ತೆಗಳು ಮತ್ತು ಸೇತುವೆಗಳನ್ನು ನಿರ್ಮಿಸಿದಾಗ, ನಾವು ಪಟ್ಟಣಗಳು ಮತ್ತು ಹಳ್ಳಿಗಳನ್ನು ಮಾತ್ರ ಸಂಪರ್ಕಿಸುವುದಿಲ್ಲ. ನಾವು ಸಾಧನೆಗಳೊಂದಿಗೆ ಆಕಾಂಕ್ಷೆಗಳನ್ನು , ಅವಕಾಶಗಳೊಂದಿಗೆ ಆಶಾವಾದ ಮತ್ತು ಸಂತೋಷದಿಂದ ಭರವಸೆಯನ್ನು ಸಂಪರ್ಕಿಸುತ್ತೇವೆ:ಪ್ರಧಾನಿ ಮೋದಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇರಳದ ಕೊಲ್ಲಂಗೆ ಭೇಟಿ ನೀಡಿದರು. ಅವರು ಎನ್.ಎಚ್-66 ರಲ್ಲಿ 13 ಕಿಲೋ ಮೀಟರ್ ಉದ್ದದ ದ್ವಿಪಥ ಕೊಲ್ಲಂ ಬೈಪಾಸ್ ರಸ್ತೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಕೇರಳ ರಾಜ್ಯಪಾಲರಾದ ಶ್ರೀ ನ್ಯಾಯಾಧೀಶ ( ನಿವೃತ್ತ) ಪಿ.ಸದಾಶಿವಂ, ಕೇರಳ ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್ , ಕೇಂದ್ರ ಪ್ರವಾಸೋದ್ಯಮ ಸಚಿವ ಶ್ರೀ ಕೆ.ಜೆ. ಅಲ್ಫೋನ್ಸ್ ಮತ್ತು ಇತರ ಗಣ್ಯರು ಈ ಸಮಾರಂಭದಲ್ಲಿ ಹಾಜರಿದ್ದರು.

ಕೊಲ್ಲಂನ ಅಸ್ರಮಮ್ ಮೈದಾನದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ಮೋದಿ ಅವರು ಮೂಲಸೌಕರ್ಯ ಅಭಿವೃದ್ಧಿ ತಮ್ಮ ಸರಕಾರದ ಆದ್ಯತೆಯಾಗಿದೆ ಮತ್ತು ಕೊಲ್ಲಂ ಬೈಪಾಸ್ ಇದಕ್ಕೆ ಉದಾಹರಣೆ ಎಂದರು.

ಯೋಜನೆಗೆ 2015 ರ ಜನವರಿಯಲ್ಲಿ ಅಂತಿಮ ಮಂಜೂರಾತಿ ನೀಡಲಾಯಿತು ಎಂಬುದನ್ನು ಒತ್ತಿ ಹೇಳಿದ ಅವರು ಈಗ ಅದು ಸಾಕಾರಗೊಂಡಿದೆ, ತಮ್ಮ ಸರಕಾರ ಸಾಮಾನ್ಯ ಜನತೆಯ ಜೀವಿಸುವ ಅವಕಾಶವನ್ನು ಉತ್ತಮಪಡಿಸುವುದಕ್ಕಾಗಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಲ್ಲಿ ನಂಬಿಕೆ ಇಟ್ಟಿದೆ ಎಂದರಲ್ಲದೆ ಯೋಜನೆ ಪೂರ್ಣಗೊಳಿಸುವಲ್ಲಿ ಕೇರಳ ಸರಕಾರದ ಸಹಕಾರ ಮತ್ತು ಕೊಡುಗೆಯನ್ನು ಶ್ಲಾಘಿಸಿದರು.

ಕೊಲ್ಲಂ ಬೈಪಾಸ್ ಅಲಪುಝ ಮತ್ತು ತಿರುವನಂತಪುರಂ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ ಮತ್ತು ಕೊಲ್ಲಂ ಪಟ್ಟಣದ ಸಾರಿಗೆ ದಟ್ಟಣೆಯನ್ನು ಕಡಿಮೆ ಮಾಡಲಿದೆ.

ಕೇರಳದ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು 2014ರ ಮೇ ತಿಂಗಳಿನಿಂದ ಸುಮಾರು 500 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿಯನ್ನು ಕೇರಳಕ್ಕೆ ಸೇರಿಸಲಾಗಿದೆ. ಭಾರತ್ ಮಾಲಾ ಅಡಿಯಲ್ಲಿ ಮುಂಬಯಿ –ಕನ್ಯಾಕುಮಾರಿ ಕಾರಿಡಾರಿಗೆ ಸಂಬಂಧಿಸಿದ ವಿವರವಾದ ಯೋಜನಾ ವರದಿ ತಯಾರಾಗುತ್ತಿದೆ ಎಂದರು.

ಎಲ್ಲಾ ಯೋಜನೆಗಳನ್ನೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸರಕಾರ ಬದ್ದವಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು ಪ್ರಗತಿ ಮೂಲಕ 12 ಲಕ್ಷ ಕೋ.ರೂ. ಮೌಲ್ಯದ 250 ಯೋಜನೆಗಳನ್ನು ತಮ್ಮ ಕಡೆಯಿಂದ ಪರಾಮರ್ಶೆ ಮಾಡಲಾಗಿದೆ ಎಂದೂ ಹೇಳಿದರು.

ರಸ್ತೆ ಸಂಪರ್ಕದಲ್ಲಿ ಮಾಡಲಾದ ಪ್ರಗತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ ಶ್ರೀ ಮೋದಿ ಅವರು ಹಿಂದಿನ ಸರಕಾರದ ಆಡಳಿತಕ್ಕೆ ಹೋಲಿಸಿದಾಗ ರಾಷ್ಟ್ರೀಯ ಹೆದ್ದಾರಿಗಳು, ಗ್ರಾಮೀಣ ರಸ್ತೆಗಳ ನಿರ್ಮಾಣ ದುಪ್ಪಟ್ಟಾಗಿದೆ ಎಂದರು. 90 % ಗೂ ಅಧಿಕ ಗ್ರಾಮೀಣ ಜನವಸತಿ ಪ್ರದೇಶಗಳು ಇಂದು ಸಂಪರ್ಕಿಸಲ್ಪಟ್ಟಿವೆ. ಹಿಂದಿನ ಸರಕಾರದಲ್ಲಿ ಈ ಪ್ರಮಾಣ 56 % ಇತ್ತು. ಸರಕಾರವು ಶೀಘ್ರದಲ್ಲಿಯೇ 100% ಗ್ರಾಮೀಣ ರಸ್ತೆ ಸಂಪರ್ಕದ ಗುರಿಯನ್ನು ತಲುಪಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು. ಪ್ರಾದೇಶಿಕ ವಾಯು ಸಂಪರ್ಕ ಮತ್ತು ರೈಲ್ವೇ ಮಾರ್ಗಗಳ ವಿಸ್ತರಣೆ ಗಣನೀಯ ಸುಧಾರಣೆಯನ್ನು ಸಾಧಿಸಿದೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದರು. “ ನಾವು ರಸ್ತೆಗಳನ್ನು ಮತ್ತು ಸೇತುವೆಗಳನ್ನು ನಿರ್ಮಾಣ ಮಾಡಿದಾಗ , ನಾವು ಪಟ್ಟಣಗಳನ್ನು ಮತ್ತು ಗ್ರಾಮಗಳನ್ನು ಮಾತ್ರವೇ ಸಂಪರ್ಕಿಸುವುದಲ್ಲ, ನಾವು ಆಶೋತ್ತರಗಳನ್ನು , ಆಶಾವಾದವನ್ನು ಅವಕಾಶಗಳ ಜೊತೆ ಮತ್ತು ಭರವಸೆಯನ್ನು ಸಂತೋಷದ ಜೊತೆ ಜೋಡಿಸುತ್ತೇವೆ” ಎಂದೂ ಪ್ರಧಾನಮಂತ್ರಿ ಅವರು ಹೇಳಿದರು.
ಆಯುಷ್ಮಾನ್ ಭಾರತ್ ಕುರಿತಂತೆ ಪ್ರಸ್ತಾಪಿಸಿದ ಅವರು ಈ ಯೋಜನೆ ಅಡಿಯಲ್ಲಿ 8 ಲಕ್ಷ ರೋಗಿಗಳು ಪ್ರಯೋಜನ ಪಡೆದಿದ್ದಾರೆ, ಯೋಜನೆಗೆ ಇದುವರೆಗೆ ಸರಕಾರ 1000 ಕೋ.ರೂ.ಗಳನ್ನು ಮಂಜೂರು ಮಾಡಿದೆ ಎಂದರು. ಆಯುಷ್ಮಾನ್ ಭಾರತ ಯೋಜನೆಯ ಅನುಷ್ಟಾನವನ್ನು ತ್ವರಿತಗೊಳಿಸುವಂತೆ ಕೇರಳ ಸರಕಾರಕ್ಕೆ ಮನವಿ ಮಾಡಿದ ಅವರು ಇದರಿಂದ ಜನತೆಗೆ ಲಾಭವಾಗಲಿದೆ ಎಂದರು.

 

ಕೇರಳದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮದ ಪಾತ್ರ ದೊಡ್ಡದು ಮತ್ತು ರಾಜ್ಯದ ಆರ್ಥಿಕತೆಗೂ ಅದು ದೊಡ್ದ ಕಾಣಿಕೆ ನೀಡುತ್ತಿದೆ ಎಂದೂ ಪ್ರಧಾನಮಂತ್ರಿ ಹೇಳಿದರು. ಕೇರಳದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಮನಗಂಡು ಸರಕಾರವು ರಾಜ್ಯಕ್ಕೆ ಸ್ವದೇಶ ದರ್ಶನ್ ಮತ್ತು ಪ್ರಸಾದ ಯೋಜನೆಗಳ ಅಡಿಯಲ್ಲಿ 550 ಕೋ.ರೂ. ಮೊತ್ತದ 7 ಯೋಜನೆಗಳನ್ನು ಮಂಜೂರು ಮಾಡಿದೆ ಎಂದೂ ಅವರು ವಿವರಿಸಿದರು.

ಪ್ರವಾಸೋದ್ಯಮ ಕ್ಷೇತ್ರದ ಮಹತ್ವದ ಬಗ್ಗೆ ಮಾತನಾಡಿದ ಪ್ರದಾನಮಂತ್ರಿ ಅವರು ಈ ಕ್ಷೇತ್ರದ ಗಮನೀಯ ಬೆಳವಣಿಗೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ 2016ರಲ್ಲಿ ಭಾರತದ ಬೆಳವಣಿಗೆ 14 % ಇದ್ದರೆ ವಿಶ್ವದ ಸರಾಸರಿ ಬೆಳವಣಿಗೆ 7% ಆಗಿದೆ. ವಿಶ್ವ ಪ್ರಯಾಣ ಮತ್ತು ಪ್ರವಾಸೋದ್ಯಮ ಮಂಡಳಿಯ 2018 ರ ವರದಿಯ ಪವರ್ ಶ್ರೇಯಾಂಕದಲ್ಲಿ ಭಾರತವು ಈಗ ಮೂರನೆಯ ಸ್ಥಾನದಲ್ಲಿದೆ . 2013 ರಲ್ಲಿ ಭಾರತಕ್ಕೆ ಬರುತ್ತಿದ್ದ ವಿದೇಶೀ ಪ್ರವಾಸಿಗರ ಸಂಖ್ಯೆ ಅಂದಾಜು 70 ಲಕ್ಷ ಇದ್ದದ್ದು 2017 ರಲ್ಲಿ 1 ಕೋಟಿಗೆ ಏರಿಕೆಯಾಗಿ 42 % ಹೆಚ್ಚಳ ದಾಖಲಿಸಿದೆ. ಪ್ರವಾಸೋದ್ಯಮದಿಂದ ಭಾರತದ ವಿದೇಶೀ ವಿನಿಮಯದ ಗಳಿಕೆ 2013 ರಲ್ಲಿ ಡಾಲರ್ 18 ಬಿಲಿಯನ್ ಇದ್ದದ್ದು 2017 ರಲ್ಲಿಡಲರ್ 27 ಬಿಲಿಯನ್ ಗೇರಿ 50% ಹೆಚ್ಚಳ ದಾಖಲಿಸಿದೆ. ಇ-ವೀಸಾ ಭಾರತದ ಪ್ರವಾಸೋದ್ಯಮದಲ್ಲಿ ಭಾರೀ ಬದಲಾವಣೆ ತಂದಿದೆ, 166 ರಾಷ್ಟ್ರಗಳ ಪ್ರಜೆಗಳಿಗೆ ಈ ಸೌಲಭ್ಯ ಒದಗುತ್ತಿದೆ ಎಂದೂ ಪ್ರಧಾನಮಂತ್ರಿ ಅವರು ತಿಳಿಸಿದರು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Vikas Bhi, Virasat Bhi: How JATAN, AI and Digital Archives are revolutionising India’s cultural heritage preservation

Media Coverage

Vikas Bhi, Virasat Bhi: How JATAN, AI and Digital Archives are revolutionising India’s cultural heritage preservation
NM on the go

Nm on the go

Always be the first to hear from the PM. Get the App Now!
...
ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಭಾಗವಹಿಸಿದ ಶೂರರಿಗೆ ಪ್ರಧಾನಮಂತ್ರಿ ಗೌರವ ನಮನ
August 09, 2026

ಭಾರತ ಬಿಟ್ಟು ತೊಲಗಿ ಐತಿಹಾಸಿಕ ಚಳವಳಿಯಲ್ಲಿ ಭಾಗವಹಿಸಿದ ಎಲ್ಲರನ್ನೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಮರಿಸಿದ್ದಾರೆ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಶೌರ್ಯ ಮತ್ತು ದೃಢಸಂಕಲ್ಪಕ್ಕೆ ಗೌರವ ಸಮರ್ಪಿಸಿದ್ದಾರೆ. ಮಹಾತ್ಮಾ ಗಾಂಧಿಯವರ ನಾಯಕತ್ವದಿಂದ ಪ್ರೇರಿತವಾದ ಭಾರತ ಬಿಟ್ಟು ತೊಲಗಿ ಚಳವಳಿಯ ಕರೆಯು ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಚೈತನ್ಯ ತುಂಬಿತು ಮತ್ತು ವಸಾಹತುಶಾಹಿ ಆಳ್ವಿಕೆಯನ್ನು ತೊಡೆದು ಹಾಕಲು ಭಾರತದ ಜನರ ಅಚಲ ಸಂಕಲ್ಪವನ್ನು ಪ್ರತಿಬಿಂಬಿಸಿತ್ತು ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

ಐತಿಹಾಸಿಕ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಭಾಗವಹಿಸಿದ ಎಲ್ಲರನ್ನು ಸ್ಮರಿಸುತ್ತಿದ್ದೇನೆ. ಅವರ ಸ್ಥೈರ್ಯ ಪ್ರತಿಯೊಬ್ಬ ಭಾರತೀಯನಿಗೂ ಸದಾ ಸ್ಫೂರ್ತಿಯ ಸೆಲೆಯಾಗಿರಲಿದೆ. ಮಹಾತ್ಮಾ ಗಾಂಧಿಯವರ ನಾಯಕತ್ವದಿಂದ ಪ್ರೇರಿತವಾದ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯು ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಚೈತನ್ಯವನ್ನು ತುಂಬಿತು ಮತ್ತು ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತರಾಗಲು ನಮ್ಮ ಜನರ ಅಚಲ ದೃಢಸಂಕಲ್ಪವನ್ನು ಪ್ರತಿಬಿಂಬಿಸಿತು.