ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಧ್ಯಕ್ಷರಾದ ಘನತೆವೆತ್ತ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು 19 ಜನವರಿ 2026 ರಂದು ಭಾರತಕ್ಕೆ ಅಧಿಕೃತ ಭೇಟಿ ನೀಡಿದರು. ಕಳೆದ ಹತ್ತು ವರ್ಷಗಳಲ್ಲಿ ಘನತೆವೆತ್ತ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಭಾರತಕ್ಕೆ ನೀಡಿದ ಐದನೇ ಭೇಟಿ ಇದಾಗಿದ್ದು, ಯುಎಇ ಅಧ್ಯಕ್ಷರಾಗಿ ಇದು ಅವರ ಮೂರನೇ ಅಧಿಕೃತ ಭಾರತ ಭೇಟಿಯಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಧ್ಯಕ್ಷರಾದ ಘನತೆವೆತ್ತ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರದ ಸಂಪೂರ್ಣ ವ್ಯಾಪ್ತಿಯನ್ನು ಪರಾಮರ್ಶಿಸಿದರು. ಕಳೆದ ದಶಕದಲ್ಲಿ ಭಾರತ-ಯುಎಇ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯು ನಿರಂತರವಾಗಿ ಬಲಗೊಂಡಿದೆ ಎಂದು ಉಭಯ ನಾಯಕರು ಒಪ್ಪಿಕೊಂಡರು.

ಕಳೆದ ಎರಡು ವರ್ಷಗಳಲ್ಲಿ ಅಬುಧಾಬಿಯ ಕ್ರೌನ್ ಪ್ರಿನ್ಸ್ ಘನತೆವೆತ್ತ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ದುಬೈನ ಕ್ರೌನ್ ಪ್ರಿನ್ಸ್, ಯುಎಇ ಉಪ ಪ್ರಧಾನ ಮಂತ್ರಿ ಹಾಗೂ ರಕ್ಷಣಾ ಸಚಿವರಾದ ಘನತೆವೆತ್ತ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಭಾರತಕ್ಕೆ ನೀಡಿದ ಭೇಟಿಗಳನ್ನು ಉಭಯ ನಾಯಕರು ಸ್ವಾಗತಿಸಿದರು. ಈ ಭೇಟಿಗಳು ದ್ವಿಪಕ್ಷೀಯ ಸಂಬಂಧದ ಪೀಳಿಗೆಯ ನಿರಂತರತೆಯನ್ನು ಸೂಚಿಸುತ್ತವೆ ಎಂದು ಅವರು ಈ ಸಂದರ್ಭದಲ್ಲಿ ಗಮನಿಸಿದರು.

ಸೆಪ್ಟೆಂಬರ್ 2025ರಲ್ಲಿ ನಡೆದ ಹೂಡಿಕೆಗಳ ಮೇಲಿನ 13ನೇ ಉನ್ನತ ಮಟ್ಟದ ಕಾರ್ಯಪಡೆಯ ಫಲಿತಾಂಶಗಳನ್ನು ಹಾಗೂ ಡಿಸೆಂಬರ್ 2025ರಲ್ಲಿ ನಡೆದ 16ನೇ ಭಾರತ-ಯುಎಇ ಜಂಟಿ ಆಯೋಗದ ಸಭೆ ಮತ್ತು 5 ನೇ ಕಾರ್ಯತಂತ್ರದ ಮಾತುಕತೆಯ ಫಲಿತಾಂಶಗಳನ್ನು ಉಭಯ ನಾಯಕರು ಅನುಮೋದಿಸಿದರು.

2022 ರಲ್ಲಿ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (CEPA) ಸಹಿ ಹಾಕಿದಾಗಿನಿಂದ ವ್ಯಾಪಾರ ಮತ್ತು ಆರ್ಥಿಕ ಸಹಕಾರದಲ್ಲಿನ ಭದ್ರವಾದ ಬೆಳವಣಿಗೆಯನ್ನು ಉಭಯ ನಾಯಕರು ಸ್ವಾಗತಿಸಿದರು. ಅಲ್ಲದೆ, 2024-25 ರ ಹಣಕಾಸು ವರ್ಷದಲ್ಲಿ 100 ಬಿಲಿಯನ್ ಅಮೆರಿಕನ್ ಡಾಲರ್‌ ಗಳನ್ನು ತಲುಪಿದ ದ್ವಿಪಕ್ಷೀಯ ವ್ಯಾಪಾರದ ಕ್ಷಿಪ್ರ ಬೆಳವಣಿಗೆಯನ್ನು ಅವರು ಗಮನಿಸಿದರು. ಉಭಯ ದೇಶಗಳ ವ್ಯಾಪಾರ ಸಮುದಾಯಗಳ ಉತ್ಸಾಹದಿಂದ ಉತ್ತೇಜಿತರಾದ ನಾಯಕರು, 2032 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 200 ಬಿಲಿಯನ್ ಅಮೆರಿಕನ್ ಡಾಲರ್‌ ಗಳ ಗುರಿಗೆ ದ್ವಿಗುಣಗೊಳಿಸಲು ನಿರ್ಧರಿಸಿದರು.

ಉಭಯ ದೇಶಗಳ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳನ್ನು (MSMEs) ಪರಸ್ಪರ ಸಂಪರ್ಕಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಅವರು ತಮ್ಮ ತಂಡಗಳಿಗೆ ನಿರ್ದೇಶನ ನೀಡಿದರು. ಈ ನಿಟ್ಟಿನಲ್ಲಿ, ಮಧ್ಯಪ್ರಾಚ್ಯ, ಪಶ್ಚಿಮ ಏಷ್ಯಾ, ಆಫ್ರಿಕಾ ಮತ್ತು ಯುರೇಷಿಯಾ ಪ್ರದೇಶಗಳಲ್ಲಿ MSME ಉತ್ಪನ್ನಗಳನ್ನು ಉತ್ತೇಜಿಸಲು ‘ಭಾರತ್ ಮಾರ್ಟ್’, ‘ವರ್ಚುವಲ್ ಟ್ರೇಡ್ ಕಾರಿಡಾರ್’ ಮತ್ತು ‘ಭಾರತ್-ಆಫ್ರಿಕಾ ಸೇತು’ವಿನಂತಹ ಪ್ರಮುಖ ಉಪಕ್ರಮಗಳನ್ನು ತ್ವರಿತವಾಗಿ ಜಾರಿಗೊಳಿಸಲು ಅವರು ಕರೆ ನೀಡಿದರು.

2024 ರಲ್ಲಿ ಸಹಿ ಹಾಕಲಾದ ದ್ವಿಪಕ್ಷೀಯ ಹೂಡಿಕೆ ಒಪ್ಪಂದವು ಉಭಯ ದೇಶಗಳ ವಿವಿಧ ವಲಯಗಳಲ್ಲಿ ಹೂಡಿಕೆಯ ಹರಿವನ್ನು ಮತ್ತಷ್ಟು ಬಲಪಡಿಸಿದೆ ಎಂದು ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಗುಜರಾತ್‌ ನ ಧೋಲೇರಾದಲ್ಲಿನ ವಿಶೇಷ ಹೂಡಿಕೆ ವಲಯದ ಅಭಿವೃದ್ಧಿಗಾಗಿ ಯುಎಇ ಜೊತೆಗಿನ ಸಂಭಾವ್ಯ ಪಾಲುದಾರಿಕೆಯ ಕುರಿತಾದ ಚರ್ಚೆಗಳನ್ನು ಅವರು ಸ್ವಾಗತಿಸಿದರು. ಈ ಉದ್ದೇಶಿತ ಪಾಲುದಾರಿಕೆಯು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಪೈಲಟ್ ತರಬೇತಿ ಶಾಲೆ, ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷೆ (MRO) ಸೌಲಭ್ಯ, ಗ್ರೀನ್‌ ಫೀಲ್ಡ್ ಬಂದರು, ಸ್ಮಾರ್ಟ್ ಅರ್ಬನ್ ಟೌನ್‌ ಶಿಪ್, ರೈಲ್ವೆ ಸಂಪರ್ಕ ಮತ್ತು ಇಂಧನ ಮೂಲಸೌಕರ್ಯ ಸೇರಿದಂತೆ ಪ್ರಮುಖ ಕಾರ್ಯತಂತ್ರದ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ಒಳಗೊಂಡಿರುತ್ತದೆ. ಮೊದಲ ಎನ್‌ ಐ ಐ ಎಫ್ (NIIF) ಮೂಲಸೌಕರ್ಯ ನಿಧಿಯ ಯಶಸ್ಸನ್ನು ಎತ್ತಿ ತೋರಿಸಿದ ಭಾರತದ ಪ್ರಧಾನ ಮಂತ್ರಿಗಳು, 2026 ರಲ್ಲಿ ಪ್ರಾರಂಭವಾಗಲಿರುವ ಎರಡನೇ ಮೂಲಸೌಕರ್ಯ ನಿಧಿಯಲ್ಲಿ ಭಾಗವಹಿಸುವ ಬಗ್ಗೆ ಪರಿಗಣಿಸಲು ಯುಎಇಯ ಸಾರ್ವಭೌಮ ಸಂಪತ್ತಿನ ನಿಧಿಗಳನ್ನು (Sovereign Wealth Funds) ಆಹ್ವಾನಿಸಿದರು. ಗಿಫ್ಟ್ ಸಿಟಿಯಲ್ಲಿ ಡಿಪಿ ವರ್ಲ್ಡ್ ಮತ್ತು ಫಸ್ಟ್ ಅಬುಧಾಬಿ ಬ್ಯಾಂಕ್ ಶಾಖೆಗಳ ಸ್ಥಾಪನೆಯನ್ನು ಉಭಯ ನಾಯಕರು ಸ್ವಾಗತಿಸಿದರು, ಇದು ಪ್ರಮುಖ ಅಂತರಾಷ್ಟ್ರೀಯ ಹಣಕಾಸು ಕೇಂದ್ರವಾಗಿ ಗಿಫ್ಟ್ ಸಿಟಿ ಹೊರಹೊಮ್ಮುತ್ತಿರುವುದನ್ನು ಮತ್ತಷ್ಟು ಬಲಪಡಿಸುತ್ತದೆ. ಫಸ್ಟ್ ಅಬುಧಾಬಿ ಬ್ಯಾಂಕ್‌ ನ ಈ ಶಾಖೆಯು ಒಂದು ಪ್ರಮುಖ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದು, ಭಾರತೀಯ ಕಾರ್ಪೊರೇಟ್‌ ಗಳು ಮತ್ತು ಹೂಡಿಕೆದಾರರನ್ನು GCC ಮತ್ತು MENA ಮಾರುಕಟ್ಟೆಗಳಾದ್ಯಂತ ಇರುವ ಅದರ ಪರಿಣತಿ ಮತ್ತು ಜಾಗತಿಕ ಜಾಲದೊಂದಿಗೆ ಸಂಪರ್ಕಿಸಲಿದೆ.

ಆಹಾರ ಭದ್ರತೆಯಲ್ಲಿ ಯುಎಇ-ಭಾರತದ ಸಹಕಾರವನ್ನು ಹೆಚ್ಚಿಸಲು ಎರಡೂ ಕಡೆಯವರು ತಮ್ಮ ಬಲವಾದ ಬದ್ಧತೆಯನ್ನು ಪುನರುಚ್ಚರಿಸಿದರು. ಸುಸ್ಥಿರ ಪೂರೈಕೆ ಸರಪಳಿಗಳು ಮತ್ತು ದೀರ್ಘಕಾಲೀನ ಸ್ಥಿತಿಸ್ಥಾಪಕತ್ವವನ್ನು ಖಚಿತಪಡಿಸಿಕೊಳ್ಳುವಲ್ಲಿ ಇದರ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಅವರು ಗುರುತಿಸಿದರು. ಎರಡೂ ದೇಶಗಳ ರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾಗಿ ಸುಸ್ಥಿರ ಕೃಷಿಯನ್ನು ಮುನ್ನಡೆಸುವಲ್ಲಿ ಮತ್ತು ರಾಷ್ಟ್ರೀಯ ಆಹಾರ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ, ನಾವೀನ್ಯತೆ ಮತ್ತು ಜ್ಞಾನ ವಿನಿಮಯದ ಪಾತ್ರವನ್ನು ಅವರು ಒತ್ತಿಹೇಳಿದರು.

ಬಹ್ಯಾಕಾಶ ಕ್ಷೇತ್ರದಲ್ಲಿ ಸಹಕಾರವನ್ನು ಆಳಗೊಳಿಸಲು ಉಭಯ ನಾಯಕರು ಸಮ್ಮತಿಸಿದರು. ಈ ಸಂದರ್ಭದಲ್ಲಿ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನಗಳ ಪ್ರಗತಿಯ ಮೂಲಕ ಈ ಕ್ಷೇತ್ರದ ವಾಣಿಜ್ಯೀಕರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಜಂಟಿ ಉಪಕ್ರಮದಲ್ಲಿ ಸಹಕರಿಸಲು ಮಾಡಿಕೊಂಡಿರುವ ಒಪ್ಪಂದವನ್ನು ಅವರು ಸ್ವಾಗತಿಸಿದರು. ಈ ಉಪಕ್ರಮವು ಅಂತ್ಯದಿಂದ ಅಂತ್ಯದವರೆಗಿನ (end-to-end) ಮೂಲಸೌಕರ್ಯ ಮತ್ತು ಬಲವಾದ ಕೈಗಾರಿಕಾ ನೆಲೆಯನ್ನು ಹೊಂದಿರುವ ಸಮಗ್ರ ಬಾಹ್ಯಾಕಾಶ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಇದು ಭಾರತ-ಯುಎಇ ಜಂಟಿ ಕಾರ್ಯಾಚರಣೆಗಳನ್ನು ಸಕ್ರಿಯಗೊಳಿಸಲು, ಜಾಗತಿಕ ವಾಣಿಜ್ಯ ಸೇವೆಗಳನ್ನು ವಿಸ್ತರಿಸಲು, ಉನ್ನತ ಕೌಶಲ್ಯದ ಉದ್ಯೋಗಗಳು ಮತ್ತು ಸ್ಟಾರ್ಟ್-ಅಪ್‌ ಗಳನ್ನು ಸೃಷ್ಟಿಸಲು ಹಾಗೂ ಸುಸ್ಥಿರ ವ್ಯಾಪಾರ ಮಾದರಿಗಳ ಮೂಲಕ ದ್ವಿಪಕ್ಷೀಯ ಹೂಡಿಕೆಯನ್ನು ಬಲಪಡಿಸಲು ಶ್ರಮಿಸಲಿದೆ.

ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ, ಅದರಲ್ಲೂ ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI) ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಸಹಯೋಗವನ್ನು ಬಲಪಡಿಸಲು ಉಭಯ ನಾಯಕರು ನಿರ್ಧರಿಸಿದರು. ಭಾರತದಲ್ಲಿ ಸೂಪರ್‌ ಕಂಪ್ಯೂಟಿಂಗ್ ಕ್ಲಸ್ಟರ್ ಸ್ಥಾಪಿಸಲು ಸಹಕರಿಸುವ ನಿರ್ಧಾರವನ್ನು ಸ್ವಾಗತಿಸಿದ ಅವರು, ಭಾರತದಲ್ಲಿ ಡೇಟಾ ಸೆಂಟರ್‌ ಗಳನ್ನು ಸ್ಥಾಪಿಸುವಲ್ಲಿನ ಸಹಕಾರದ ಸಾಧ್ಯತೆಗಳನ್ನು ಅನ್ವೇಷಿಸಲು ಸಹ ಸಮ್ಮತಿಸಿದರು. ಪರಸ್ಪರ ಮಾನ್ಯತೆ ಪಡೆದ ಸಾರ್ವಭೌಮ ವ್ಯವಸ್ಥೆಗಳ ಅಡಿಯಲ್ಲಿ, ಯುಎಇ ಮತ್ತು ಭಾರತದ ನಡುವೆ 'ಡಿಜಿಟಲ್ ರಾಯಭಾರ ಕಚೇರಿಗಳನ್ನು' (Digital Embassies) ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲು ಉಭಯ ನಾಯಕರು ತಮ್ಮ ತಂಡಗಳಿಗೆ ಸೂಚಿಸಿದರು. ಫೆಬ್ರವರಿ 2026 ರಲ್ಲಿ ಭಾರತದಲ್ಲಿ ಆಯೋಜಿಸಲಾಗಲಿರುವ 'ಎಐ ಇಂಪ್ಯಾಕ್ಟ್ ಸಮ್ಮಿಟ್'ಗೆ (AI Impact Summit) ಅಧ್ಯಕ್ಷರಾದ ಘನತೆವೆತ್ತ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ಉಭಯ ನಾಯಕರು ದ್ವಿಪಕ್ಷೀಯ ಇಂಧನ ಪಾಲುದಾರಿಕೆಯ ಬಲದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು ಮತ್ತು ಭಾರತದ ಇಂಧನ ಭದ್ರತೆಗೆ ಯುಎಇ ನೀಡುತ್ತಿರುವ ಕೊಡುಗೆಯನ್ನು ಒತ್ತಿಹೇಳಿದರು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಮತ್ತು ಅಡ್ನಾಕ್ ಗ್ಯಾಸ್ (ADNOC Gas) ನಡುವೆ 2028 ರಿಂದ ಪ್ರಾರಂಭವಾಗಲಿರುವ, ವರ್ಷಕ್ಕೆ 0.5 ಮಿಲಿಯನ್ ಟನ್ ದ್ರವೀಕೃತ ನೈಸರ್ಗಿಕ ಅನಿಲ (LNG) ಪೂರೈಕೆಗಾಗಿ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು. ಭಾರತದ ಇಂಧನ ಪರಿವರ್ತನೆಗಾಗಿ SHANTI (Sustainable Harnessing and Advancement of Nuclear Energy for Transforming India) ಕಾಯ್ದೆಯ ಜಾರಿಯನ್ನು ನಾಯಕರು ಸ್ವಾಗತಿಸಿದರು, ಇದು ಸುಧಾರಿತ ನಾಗರಿಕ ಪರಮಾಣು ಸಹಕಾರಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಗಮನಿಸಿದರು. ಬೃಹತ್ ಪರಮಾಣು ರಿಯಾಕ್ಟರ್‌ಗಳು ಮತ್ತು ಸಣ್ಣ ಮಾಡ್ಯುಲರ್ ರಿಯಾಕ್ಟರ್‌ ಗಳ (SMRs) ಅಭಿವೃದ್ಧಿ ಮತ್ತು ಅಳವಡಿಕೆ ಸೇರಿದಂತೆ ಸುಧಾರಿತ ಪರಮಾಣು ತಂತ್ರಜ್ಞಾನಗಳಲ್ಲಿ ಪಾಲುದಾರಿಕೆಯನ್ನು ಅನ್ವೇಷಿಸಲು ಎರಡೂ ಕಡೆಯವರು ಸಮ್ಮತಿಸಿದರು. ಅಲ್ಲದೆ, ಸುಧಾರಿತ ರಿಯಾಕ್ಟರ್ ವ್ಯವಸ್ಥೆಗಳು, ಪರಮಾಣು ವಿದ್ಯುತ್ ಸ್ಥಾವರ ಕಾರ್ಯಾಚರಣೆ, ನಿರ್ವಹಣೆ ಮತ್ತು ಪರಮಾಣು ಸುರಕ್ಷತೆಯಲ್ಲಿ ಪರಸ್ಪರ ಸಹಕರಿಸಲು ಅವರು ನಿರ್ಧರಿಸಿದರು.

ಉಭಯ ದೇಶಗಳ ನಡುವೆ ಹಣಕಾಸು ವಲಯದಲ್ಲಿ ಗಾಢವಾಗುತ್ತಿರುವ ಸಹಕಾರವನ್ನು ನಾಯಕರು ಶ್ಲಾಘಿಸಿದರು. ದಕ್ಷ, ವೇಗವಾದ ಮತ್ತು ಕಡಿಮೆ ವೆಚ್ಚದ ಗಡಿಯಾಚೆಗಿನ ಪಾವತಿಗಳನ್ನು ಸಕ್ರಿಯಗೊಳಿಸಲು ರಾಷ್ಟ್ರೀಯ ಪಾವತಿ ವೇದಿಕೆಗಳನ್ನು ಪರಸ್ಪರ ಜೋಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಅವರು ತಮ್ಮ ತಂಡಗಳಿಗೆ ಸೂಚಿಸಿದರು.

ಎರಡು ದೇಶಗಳ ನಡುವಿನ ಹಂಚಿಕೆಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಗುರುತಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಲೋಥಲ್‌ ನಲ್ಲಿರುವ ರಾಷ್ಟ್ರೀಯ ಸಮುದ್ರ ಪರಂಪರೆಯ ಸಂಕೀರ್ಣಕ್ಕೆ (National Maritime Heritage Complex) ಕಲಾಕೃತಿಗಳನ್ನು ಒದಗಿಸುವ ಯುಎಇ ನಿರ್ಧಾರವನ್ನು ಸ್ವಾಗತಿಸಿದರು. ಭಾರತ-ಯುಎಇ ಸ್ನೇಹದ ಶಾಶ್ವತ ಸಂಕೇತವಾಗಿ ಅಬುಧಾಬಿಯಲ್ಲಿ 'ಹೌಸ್ ಆಫ್ ಇಂಡಿಯಾ' ಸ್ಥಾಪಿಸಲು ಉಭಯ ನಾಯಕರು ನಿರ್ಧರಿಸಿದರು. ಸಾಂಸ್ಕೃತಿಕ ತಿಳುವಳಿಕೆಯನ್ನು ಮತ್ತಷ್ಟು ಆಳಗೊಳಿಸುವ ಉದ್ದೇಶದಿಂದ ಯುವ ವಿನಿಮಯ ಕಾರ್ಯಕ್ರಮಗಳ ಮೂಲಕ ಜನರ ನಡುವಿನ ಬಾಂಧವ್ಯವನ್ನು ನಿರಂತರವಾಗಿ ಪೋಷಿಸಲು ಅವರು ಸಮ್ಮತಿಸಿದರು.

ಭಾರತ-ಯುಎಇ ಪಾಲುದಾರಿಕೆಯಲ್ಲಿ ಶಿಕ್ಷಣವು ಪ್ರಮುಖ ಅಡಿಪಾಯ ಎಂದು ಉಭಯ ನಾಯಕರು ಗುರುತಿಸಿದರು. ಯುನೈಟೆಡ್ ಅರಬ್ ಎಮಿರೇಟ್ಸ್‌ ನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ದೆಹಲಿ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಅಹಮದಾಬಾದ್‌ ನ ವಿದೇಶಿ ಕ್ಯಾಂಪಸ್‌ ಗಳ ಸ್ಥಾಪನೆಯ ಯಶಸ್ಸನ್ನು ಆಧರಿಸಿ, ಎರಡೂ ದೇಶಗಳ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಬಾಂಧವ್ಯವನ್ನು ಉತ್ತೇಜಿಸಲು ಹೆಚ್ಚಿನ ಪ್ರಯತ್ನಗಳನ್ನು ಅವರು ಪ್ರೋತ್ಸಾಹಿಸಿದರು. ಇದು ಉಭಯ ದೇಶಗಳ ನಡುವೆ ಜ್ಞಾನದ ಸೇತುವೆಯಾಗಿ ಕಾರ್ಯನಿರ್ವಹಿಸುವ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳ ವಿಸ್ತರಣೆಯನ್ನೂ ಒಳಗೊಂಡಿದೆ. ಇದರ ಜೊತೆಗೆ ಶಾಲೆ ಮತ್ತು ಕಾಲೇಜುಗಳಲ್ಲಿ ನಾವೀನ್ಯತೆ ಮತ್ತು ಟಿಂಕರಿಂಗ್ ಲ್ಯಾಬ್‌ ಗಳನ್ನು ವಿಸ್ತರಿಸುವಲ್ಲಿ ಸಹಕರಿಸಲು ಅವರು ನಿರ್ಧರಿಸಿದರು. ಭಾರತೀಯ ಶೈಕ್ಷಣಿಕ ಪದವಿಗಳು ಮತ್ತು ದಾಖಲೆಗಳ ಸುಲಭ ದೃಢೀಕರಣಕ್ಕಾಗಿ ಭಾರತದ 'ಡಿಜಿಲಾಕರ್' ಅನ್ನು ಯುಎಇ ಪ್ಲಾಟ್‌ ಫಾರ್ಮ್‌ ಗಳೊಂದಿಗೆ ಸಂಯೋಜಿಸುವ ನಿಟ್ಟಿನಲ್ಲಿ ಮಾಡಿಕೊಂಡಿರುವ ಒಪ್ಪಂದವನ್ನು ನಾಯಕರು ಸ್ವಾಗತಿಸಿದರು. ಈ ಕ್ರಮವು ಆರ್ಥಿಕ ಮತ್ತು ಶೈಕ್ಷಣಿಕ ಅವಕಾಶಗಳನ್ನು ಹೆಚ್ಚಿಸುವುದಲ್ಲದೆ, ಜನರ ಜೀವನದ ಸುಗಮತೆಯನ್ನು ವೃದ್ಧಿಸಲಿದೆ.

ಉಭಯ ನಾಯಕರು ಪರಸ್ಪರರ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಬಗ್ಗೆ ಇರುವ ಗಾಢವಾದ ಗೌರವವನ್ನು ಹಾಗೂ ಕಾರ್ಯತಂತ್ರದ ಸ್ವಾಯತ್ತತೆಯ ಮಹತ್ವವನ್ನು ಒತ್ತಿ ಹೇಳಿದರು. ಸ್ಥಿರವಾದ ಮತ್ತು ಬಲವಾದ ದ್ವಿಪಕ್ಷೀಯ ರಕ್ಷಣಾ ಹಾಗೂ ಭದ್ರತಾ ಸಹಕಾರವು 'ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ'ಯ ಪ್ರಮುಖ ಅಡಿಪಾಯ ಎಂದು ಅವರು ಒಪ್ಪಿಕೊಂಡರು. ಉಭಯ ದೇಶಗಳ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರು ಹಾಗೂ ಕಮಾಂಡರ್‌ ಗಳ ಇತ್ತೀಚಿನ ಪರಸ್ಪರ ಭೇಟಿಗಳು ಮತ್ತು ದ್ವಿಪಕ್ಷೀಯ ಸೇನಾ ಸಮರಾಭ್ಯಾಸಗಳ ಯಶಸ್ವಿ ನಿರ್ವಹಣೆಯಿಂದ ಮೂಡಿಬಂದ ವೇಗವನ್ನು ಅವರು ಸ್ವಾಗತಿಸಿದರು. ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ 'ಆಶಯ ಪತ್ರ'ಕ್ಕೆ (Letter of Intent) ಸಹಿ ಹಾಕಿರುವುದನ್ನು ಅವರು ಈ ಸಂದರ್ಭದಲ್ಲಿ ಸ್ವಾಗತಿಸಿದರು.

ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಉಭಯ ನಾಯಕರು ಸ್ಪಷ್ಟವಾಗಿ ಖಂಡಿಸಿದರು. ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ನೆರವು ನೀಡುವವರಿಗೆ, ಯೋಜನೆ ರೂಪಿಸುವವರಿಗೆ, ಬೆಂಬಲಿಸುವವರಿಗೆ ಅಥವಾ ಕೃತ್ಯ ಎಸಗುವವರಿಗೆ ಯಾವುದೇ ದೇಶವು ಸುರಕ್ಷಿತ ಆಶ್ರಯ ನೀಡಬಾರದು ಎಂದು ಅವರು ಒತ್ತಿ ಹೇಳಿದರು. ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ತಡೆಯಲು ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಪ್ರಯತ್ನಗಳನ್ನು ಬಲಪಡಿಸಲು ಹಣಕಾಸು ಕ್ರಿಯಾ ಕಾರ್ಯಪಡೆಯ (FATF) ಚೌಕಟ್ಟಿನೊಳಗೆ ಸಹಕಾರವನ್ನು ಮುಂದುವರಿಸಲು ಅವರು ಒಪ್ಪಿಕೊಂಡರು.

ಸೆಪ್ಟೆಂಬರ್ 2023 ರಲ್ಲಿ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC) ಅನ್ನು ಪ್ರಾರಂಭಿಸಿದ್ದನ್ನು ಉಭಯ ನಾಯಕರು ಸ್ಮರಿಸಿದರು.

ಉಭಯ ನಾಯಕರು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯಲ್ಲಿ ತಮ್ಮ ಹಂಚಿಕೆಯ ಹಿತಾಸಕ್ತಿಯನ್ನು ಅವರು ಒತ್ತಿ ಹೇಳಿದರು. ಬಹುಪಕ್ಷೀಯ ಮತ್ತು ಅನೇಕಪಕ್ಷೀಯ ವೇದಿಕೆಗಳಲ್ಲಿನ ಅತ್ಯುತ್ತಮ ಸಹಕಾರ ಮತ್ತು ಪರಸ್ಪರ ಬೆಂಬಲವನ್ನು ಅವರು ಗಮನಿಸಿದರು. 2026 ರಲ್ಲಿ ಭಾರತದ ಬ್ರಿಕ್ಸ್ (BRICS) ಅಧ್ಯಕ್ಷತೆಯ ಯಶಸ್ಸಿಗೆ ಯುಎಇ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿತು. ಅದೇ ರೀತಿ, 2026 ರ ಕೊನೆಯಲ್ಲಿ ಯುಎಇ ಸಹ-ಆಯೋಜಿಸಲಿರುವ 2026 ರ ವಿಶ್ವಸಂಸ್ಥೆಯ ಜಲ ಸಮ್ಮೇಳನಕ್ಕೆ ಭಾರತವು ತನ್ನ ಬೆಂಬಲವನ್ನು ಸೂಚಿಸಿತು. ಈ ಸಮ್ಮೇಳನವು ಎಲ್ಲರಿಗೂ ನೀರು ಮತ್ತು ನೈರ್ಮಲ್ಯದ ಲಭ್ಯತೆ ಹಾಗೂ ಸುಸ್ಥಿರ ನಿರ್ವಹಣೆಯನ್ನು ಖಚಿತಪಡಿಸುವ 'ಸುಸ್ಥಿರ ಅಭಿವೃದ್ಧಿ ಗುರಿ 6' (SDG 6) ರ ಅನುಷ್ಠಾನವನ್ನು ವೇಗಗೊಳಿಸುವತ್ತ ಗಮನಹರಿಸಲಿದೆ.

ಧ್ರುವ ವಿಜ್ಞಾನದಲ್ಲಿನ (Polar Science) ತಮ್ಮ ಸಹಕಾರವನ್ನು ಉಭಯ ದೇಶಗಳು ಎತ್ತಿ ತೋರಿಸಿದವು ಮತ್ತು ಜಂಟಿ ಪರಿಶೋಧನೆಗಳು ಹಾಗೂ ಸಾಂಸ್ಥಿಕ ಸಹಕಾರದ ಧನಾತ್ಮಕ ಫಲಿತಾಂಶಗಳನ್ನು ಗಮನಿಸಿದವು. ಗುರಿ ಆಧಾರಿತ ವೈಜ್ಞಾನಿಕ ಉಪಕ್ರಮಗಳು, ಸಮನ್ವಯ ಸಂಶೋಧನಾ ಯೋಜನೆ ಮತ್ತು ರಾಷ್ಟ್ರೀಯ ಧ್ರುವ ಸಂಶೋಧನಾ ಸಂಸ್ಥೆಗಳ ನಡುವೆ ಬಲಪಡಿಸಿದ ಸಹಕಾರದ ಮೂಲಕ ಈ ಪಾಲುದಾರಿಕೆಯನ್ನು ಮತ್ತಷ್ಟು ಮುನ್ನಡೆಸಲು ಉಭಯ ಕಡೆಯವರು ಒಪ್ಪಿಕೊಂಡರು. ಧ್ರುವ ಪ್ರದೇಶಗಳಲ್ಲಿನ ನಿರಂತರ ಸಹಕಾರವು ಸಾಕ್ಷ್ಯಾಧಾರಿತ ಹವಾಮಾನ ಕ್ರಮಗಳನ್ನು ಬೆಂಬಲಿಸುತ್ತದೆ ಮತ್ತು ಜಾಗತಿಕ ವೈಜ್ಞಾನಿಕ ಪ್ರಯತ್ನಗಳಿಗೆ ಕೊಡುಗೆ ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು.

ತಮಗೆ ನೀಡಿದ ಆತ್ಮೀಯ ಸ್ವಾಗತ ಮತ್ತು ಉದತ್ತ ಆತಿಥ್ಯಕ್ಕಾಗಿ ಘನತೆವೆತ್ತ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Parliament clears Vande Mataram Bill; national song gets same legal protection as anthem

Media Coverage

Parliament clears Vande Mataram Bill; national song gets same legal protection as anthem
NM on the go

Nm on the go

Always be the first to hear from the PM. Get the App Now!
...
Prime Minister congratulates Seema on winning Bronze in Women’s Discus Throw at Commonwealth Games 2026
July 31, 2026

The Prime Minister, Shri Narendra Modi, has congratulated Seema on winning the Bronze medal in the Women’s Discus Throw event at the Glasgow Commonwealth Games 2026.

The Prime Minister noted that Seema secured the medal with a best throw of 58.65 metres.

Shri Modi said that her achievement has made India proud and inspired the youth of the nation. He wished her the very best for her future endeavours.

Shri Modi posted on X;

“Congratulations to Seema for securing a Bronze in the Women's Discus Throw event with a best throw of 58.65m. Her efforts have made India proud and motivated the youth of our nation. Wishing her the very best for the endeavours ahead.

#CWG2026”